June 4, 2006

ಕುಂದಾಪ್ರ ಕನ್ನಡ

ಕುಂದಗನ್ನಡ ನನ್ನ ಪ್ರಕಾರ ಬಹಳ ವೈವಿಧ್ಯಮಯವೂ, ಶ್ರೀಮಂತವೂ ಆದ ಭಾಷೆ. ಕುಂದಗನ್ನಡದಲ್ಲಿನ ಹಲವಾರು ವಿಶಿಷ್ಟ ಪದಗಳು ನನಗೆ ಯಾವತ್ತೂ ಕುತೂಹಲ ಮೂಡಿಸುತ್ತವೆ.
ಉದಾಹರಣೆಗೆ ಈ ಶಬ್ದಗಳು-ಚಾಂದ್ರಾಣ, ಅಟ್ರಕಾಣಿ, ತದ್ಯಾಪ್ರತ, ಹಕ್ಲಕಥೆ, ಹರ್ಕಟಿ... ಇವುಗಳ ಶಬ್ದನಿಷ್ಪತ್ತಿಯ ಕುರಿತು ಯಾರಿಗಾದರೂ ಗೊತ್ತಿದ್ದರೆ ತಿಳಿಸಿ.

ಕೆಲವೊಂದು ಶಬ್ದಗಳಿಗೆ ನನ್ನ ಊಹೆಯ ಪ್ರಕಾರದ ಸಂವಾದಿ 'ಗ್ರಂಥಸ್ಥ' ಕನ್ನಡದ ಶಬ್ದ ಕೊಟ್ಟಿದ್ದೇನೆ. ಇವೆಲ್ಲವೂ ಮೂಲಶಬ್ದಗಳ ಅಪಭ್ರಂಶಗಳು.
ಮರ್ಕು (ಮರುಕ, ಮರುಗುವುದು) = ಅಳು,
ಮೇನತ್ತು (ಮೆಹನತ್ತು) = ವಿಶೇಷ - ನಾನ್ ಮೇನತ್ತ್ ಅಂದ್ಕಂಡ್ ಮಾಡಿದೆ ಕಾಣ್,
ಏಗ್ಳಿಕೆ (ಏಗಳ್ - ಹಳೆಗನ್ನಡ)=ಯಾವಾಗ - ಮದಿ (ಮದುವೆ) ಏಗ್ಳಿಕೆ?
ನೀಕು (ನಿಲುಕು).

ಇನ್ನೊಂದಿಷ್ಟು ಕನ್ನಡ ಶಬ್ದಗಳ ಪ್ರಯೋಗ ನಮ್ಮಲ್ಲಿ ವಿಶಿಷ್ಟವಾಗಿದೆ.
ನಿಘಂಟು = ಖಚಿತತೆ - ಉಪನಯನ ಏಗ್ಳಿಕೆ ಅಂತೇಳಿ ಇನ್ನೂ ನಿಘಂಟಿಲ್ಲ.
ಸಾಬೀತು = ನಿರ್ವಿಘ್ನ - ಉಪನಯನ ಸಾಬೀತೆಗಾದ್ರೆ, ಅದೆ ದೊಡ್ಡದು.
ಕಂತು = ಮುಳುಗು - ಹೊತ್ತ್ ಕಂತಿಯಾಯ್ತಲೆ ಮಣಿ ಹಂಗರೆ, ಸಾಲ್ದಾ ಆಡದ್ದ್?

ಇಗೊ ಕನ್ನಡ(ಕನ್ನಡ ಪದಗಳ ವ್ಯುತ್ಪತ್ತಿ, ಪದಪ್ರಯೋಗಗಳ ಕುರಿತಾದ ಗ್ರಂಥ)ದಲ್ಲಿ ನಾನು ಓದಿದ ಒಂದು ಶಬ್ದದ ವಿವರಣೆ - ಈ ಪದ ಕುಂದಾಪುರದ ಬಳಿಯ ಶಾಸನವೊಂದರ ಮೂಲಕ ದೊರೆತಿದೆ. ಈ ಶಬ್ದದ ಅರ್ಥ ಇದುವರೆಗೂ ಗೊತ್ತಾಗಿಲ್ಲ:-))

ಶಿವರಾಮ ಕಾರಂತರ 'ಹುಚ್ಚುಮನಸಿನ ಹತ್ತು ಮುಖಗಳು' ಕೃತಿಯಲ್ಲಿನ ಒಂದು ಮಾತು - "ಅಪ್ಪ ಹೋತ, ಮಗ ಆಡು":-))

ಮಂಗಳೂರಿನಿಂದ ಕುಂದಾಪುರದ ಶಾಲೆಯೊಂದಕ್ಕೆ ಅಧ್ಯಾಪಕರೊಬ್ಬರು ವರ್ಗವಾಗಿದ್ದರು. ಮೊದಲ ದಿನವೆ ವಿಧ್ಯಾರ್ಥಿಯೊಬ್ಬ ಬಂದು ಕೇಳಿದ್ದು - ಸಾರ್ ಇವತ್ತ್ ಪಾಠ ಮಾಡಿದ್ದೆಲ್ಲಾ 'ಬರ್ಕಂಬರ್ಕಾ'(ಬರೆದುಕೊಂಡು ಬರಬೇಕಾ)?

ಇಂಗ್ಲಿಷ್ ಪ್ರಾಧ್ಯಾಪಕರಿಗೂ ಕನ್ನಡ ಪಂಡಿತರಿಗೂ ಸ್ಪರ್ಧೆ ನಡೀತಂತೆ. ಕನ್ನಡದ ಯಾವುದೇ ವಾಕ್ಯವನ್ನು ಇಂಗ್ಲೀಷಿಗೆ ಅನುವಾದಿಸುತ್ತೇವೆ ಅಂತ ಇಂಗ್ಲಿಷ್ ಪ್ರಾಧ್ಯಾಪಕರು. ಕನ್ನಡ ಪಂಡಿತರು ಕೊಟ್ಟ ವಾಕ್ಯ - ಹರ್ಕಟಿ ಚಾಪಿ ಹಾಯ್ಕಂಡ್ ತೆವಡಸ್ಕಣಿ ಕಾಂಬೊ:-)

ನಮ್ಮೂರಿನ ಕಪ್ಪೆಗಳಿಗೂ ಇಂಗ್ಲಿಷ್ ಬರತ್ತೆ ಗೊತ್ತಾ? ಮಳೆ ಬರುವಾಗ ಅವು 'ನೀರು, ನೀರು' ಅನ್ನಲ್ಲ. ಬದಲಾಗಿ 'ವಟರ್, ವಟರ್' ಅನ್ನತ್ತೆ.:-)

No comments: