May 24, 2007

ಸೊಲಗೆ

'ಸೊಲಗೆ'
ಸೊಲಗೆ = ೫೦ ಮಿ.ಲಿ.
೪ ಸೊಲಗೆಗೆ ಒಂದು ಸಿದ್ದಿ (ಸಿದ್ದೆ). ೫ ಸಿದ್ದಿಗೆ ಒಂದು ಲೀಟರ್.

ಹಾಲಿನ ಡೈರಿ, ಪ್ಯಾಕೆಟ್ ಹಾಲು ಬರುವ ಮುಂಚೆ ಹಾಲಿನ ಲೆಕ್ಕಾಚಾರವೆಲ್ಲ ಸಿದ್ದಿ, ಸೊಲಗೆಗಳ ಲೆಕ್ಕದಲ್ಲಿ.
"ಶೆಟ್ಟರ ಮನೆಗೆ ೪ ಸಿದ್ದಿ ಹಾಲು ಕೊಡ್ಕ್".
"ಮೊನ್ನೆ ಅಮಾವಾಸ್ಯೆಯಿಂದ ಹಾಲ್ ಕೊಡುಕೆ ಶುರು ಮಾಡದ್ದ್. ದಿನಕ್ಕೆ ೩ ಸಿದ್ದಿ ಹಾಲ್. ಸಿದ್ದಿಗೆ ೨ ರೂಪಾಯಿಯಾದ್ರೆ, ಒಟ್ಟ್ ಎಷ್ಟಾಯ್ತ್?".
"ಮಗ ಬಯಿಂದ (ಬಂದಿದ್ದಾನೆ). ಎರಡ್ ಸೊಲಗೆ ಹಾಲ್ ಹೆಚ್ಚು ಕೊಡುವಲೆ (ಕೊಡು)".

'ಸೊಲಗೆ' ದ್ರವಗಳ ಮಾಪನದ ಕನಿಷ್ಠ ಮಿತಿಯಾಗಿಯೂ ಉಪಯೋಗ ಆಗತ್ತೆ.
"ಅಷ್ಟೆಲ್ಲ ಬ್ಯಾಡ. ಒಂದ್ ಸೊಲಗೆ ಅಷ್ಟೆಯ"

ಧಾನ್ಯಗಳ ಮಾಪನದಲ್ಲಿ ಹೆಚ್ಚಾಗಿ ಉಪಯೋಗ ಆಗುವುದು "ಪಾವು", "ಸೇರು", "ಕಳ್ಸಿಗೆ", "ಮಾನಿಗೆ", "ಮುಡಿ".
೪ ಪಾವು = ಒಂದು ಸೇರು.
೧೪ ಸೇರು = ಒಂದು ಕಳ್ಸಿಗೆ
೪೨ ಸೇರು = ೩ ಕಳ್ಸಿಗೆ = ಒಂದು ಮಾನಿಗೆ = ಇದು ಸರಿಸುಮಾರು ೪೦ ಕೆ.ಜಿ. ಅಂತೆ.
ಒಂದು ಮುಡಿಗೆ ಎಷ್ಟು ಸೇರು? ೪೮?

"ನಾಕ್ (೪) ಸೇರ್ ಭತ್ತ ಕೊಡ್".
"ಎಷ್ಟ್ ಮಾನಿಗೆ ಭತ್ತ ಬೆಳಿತ್ರಿ?".
"ಅದ್ ನಾಕ್ ಮುಡಿ ಗದ್ದೆ".

ಈ ಪರಿಮಾಣಗಳೆಲ್ಲ ಒಂದು ಪ್ರದೇಶದಿಂದ ಒಂದು ಪ್ರದೇಶದಿಂದ ಬೇರೆ ಬೇರೆ ಆಗಿರತ್ತೆ. ಪೂರಕ ಓದಿಗೆ ಕನ್ನಡಪ್ರಭದ ಲೇಖನ - ಓದಿ. ಈ ಲೇಖನದ ಪ್ರಕಾರ ೪ ಸಿದ್ದೆಗೆ ಒಂದು ಪಾವು. ಆದ್ರೆ ನಮ್ಮಲ್ಲಿ ಸಿದ್ದೆ ಉಪಯೋಗಿಸುವುದು ದ್ರವಗಳಿಗೆ ಮಾತ್ರ, ಧಾನ್ಯಗಳಿಗಲ್ಲ. " ೪ ಸಿದ್ದೆ ಹಾಲು", " ೪ ಸೇರ್ ಭತ್ತ".

ಕುಂದಗನ್ನಡ ಪಂಡಿತರಿದ್ದರೆ ತಿದ್ದಿ. ಬಾಲ ಬೇಕಿದ್ರೆ ಜೋಡ್ಸಿ:-)) ನಮ್ಮ reviewers ಮತ್ತೆ inspector ಇನ್ನೂ ಕಾಣೆಯಾಗಿದ್ದಾರೆ:-((

ಬೋನಸ್ ಪ್ರಶ್ನೆಗೆ ಉತ್ರ:- ಕರ್ನಾಟಕ ಏಕೀಕರಣದಲ್ಲಿ ಬಹುವಾಗಿ ಶ್ರಮಿಸಿದ ಕೋ.ಶಿವರಾಮ ಕಾರಂತರ ಸಹೋದರ - ರಾಮಕೃಷ್ಣ ಕಾರಂತ.
ನಾನೋದಿದ 'ಕರ್ನಾಟಕ ಏಕೀಕರಣ" ಕುರಿತಾದ ಒಂದೆರಡು ಪುಸ್ತಕಗಳಲ್ಲಿ ಓದಿದ್ದೆ. ಮತ್ತೆ ವೈದೇಹಿಯವರ ಬಳಿ ಕೇಳಿ ತಿಳಿದದ್ದು. ಹೆಚ್ಚು ಮಾಹಿತಿ ನನ್ನ ಹತ್ರ ಇಲ್ಲ. ಬಲ್ಲವರು ತಿಳಿಸುವಂತವರಾಗಿ:-)

ಇವತ್ತಿನ ಸವಾಲು :
ಇದರ ಅರ್ಥ ಏನು - 'ತಟ್ಕ್'?

ಬೋನಸ್ ಪ್ರಶ್ನೆ :
'ತಟ್ಕ್' ಪದದ ಸಂವಾದಿ ಹವ್ಯಗನ್ನಡದ ಪದ ಯಾವುದು?

ಬಾಲಂಗೋಚಿ :
"ರಾಮ (ತೆಂಗಿನ) ಕಾಯಿ ಕೊಯ್ಯುಕೆ ಬಯಿಂದ. ನಾನ್ ಇನ್ನೊಂದೆರಡ್ ಕೆಲ್ಸ ಹಮ್ಸಕಂಡಿದ್ದೆ. ನೀನ್ ಎಲ್ಲ ಬಿಟ್ಟ್ ಇಷ್ಟೊತ್ತಿಗೆ ಸೊಲಗೆ, ಸಿದ್ದೆ..ಅನ್ಕಂಡ್ ಫೋನ ಮಾಡ್ರೆ? ಪುರ್ಸೊತ್ತಿದ್ದಾಗ್ಳಿಕೆ ಫೋನ್ ಮಾಡ್, ಆಗ್ದಾ (ಆಗೊಲ್ಲವೆ)?" ಅಂತ ಅಮ್ಮ ಫೋನ್ ಇಟ್ಟಿದ್ದರಿಂದ ಈ ಅಧ್ಯಾಯ ಇಲ್ಲಿಗೆ ಪರಿಸಮಾಪ್ತಿಯಾಗುತ್ತಿದೆ. ಮಂಗಳಂ:-))

May 19, 2007

ಶುಭಹಾರೈಕೆಗಳು

ಮಿತ್ರರೇ,
ನಮ್ಮ ನಿಮ್ಮ ನೆಚ್ಚಿನ ತುಳಸಿಯಮ್ಮ ನವರ ಚೊಚ್ಚಲ ಪುಸ್ತಕ ನಾಳೆ ಬಿಡುಗಡೆಯಾಗುತ್ತಿದೆ. ಶುಭ ಹಾರೈಸಿ ಮತ್ತು ಪುಸ್ತಕ ಕೊಳ್ಳಿ (ಕಾಸು ಕೊಟ್ಟು:-)).

ತುಳಸಿಯಮ್ಮ,
ನಮ್ಮ ಜಗಲಿಯಿಂದ ನಿಮಗೆ ಶುಭ ಹಾರೈಕೆಗಳು.

ಜಗಲಿ ಭಾಗವತರು:-)

May 13, 2007

ಗಂಟಿ

'ಗಂಟಿ' = ದನ, ಎಮ್ಮೆ, ಎತ್ತು, ಹೋರಿ,(Live stock, ನಾಯಿ ಬೆಕ್ಕುಗಳನ್ನ ಬಿಟ್ಟು)
ಸಂತು ಅವರ ವಿವರಣೆ ತುಂಬ ಚೆನ್ನಾಗಿದೆ.

"ಇವ ಎಂತಕೂ (ಏನಕ್ಕೂ) ಆಪವ್ನಲ್ಲ (ಆಗುವವನಲ್ಲ). 'ಗಂಟಿ' ಮೇಸುಕೆ (ಮೇಯಿಸಲಿಕ್ಕೆ) ಅಡ್ಡಿಲ್ಲ."
"ನಾನ್ ಇವತ್ತ್ ಮದಿಗ್ (ಮದ್ವೆಗೆ) ಹೋಯ್ಕ್. ನೀನ್ 'ಗಂಟಿ' ಕಂಡ್ಕಂತ್ಯಾ? (ನೋಡ್ಕೋತೀಯ)"
"ಅಮ್ಮ, 'ಗಂಟಿ'ಗ್ ಹುಲ್ಲ್ ಹಾಕಿದ್ಯಾ? ದನ ಕೂಗ್ತಿತ್ತಪ್ಪ ಆಗ್ಳಿಂದ (ಆವಾಗಿಂದ)"

'ಹೆಂಗರು' - ಹೆಣ್ಣು ಕರು
'ಗುಡ್ಡ' - ಗಂಡು ಕರು
"ದನ ಕರು ಹಾಕಿತ್ತ? ಗುಡ್ಡವ? ಹೆಂಗರುವ?"

'ಕಡಸು' - ಕರುವಿಗಿಂತ ಕೊಂಚ ದೊಡ್ಡದಾದ, ಇನ್ನೂ ಗರ್ಭಧರಿಸಿರದ ಎಳೆಗರು:-)
'ಕಡಸು' ಶಬ್ದ ತಮಿಳು, ಮಲಯಾಳಂನ 'ಕಡಾ' ಶಬ್ದದಿಂದ ಬಂದಿರಬಹುದು ಅಂತ ಎಲ್ಲೋ ಓದಿದ್ದೆ.

'ಬತ್ತ್ ಗಂದಿ' = ಬತ್ತಿದ ದನ, ಹಾಲು ಕೊಡದ ದನ.
"'ಬತ್ತ್ ಗಂದಿ' ಮಾರಾಯ್ರೆ ಅದ್. ಹಾಲೇ ಇಲ್ಲ ಕಾಣಿ."

ದನಗಳ ಆಹಾರ - 'ಹಿಂಡಿ', 'ಅಕ್ಕಚ್ಚು'
"ದನಕ್ಕೆ ಅಕ್ಕಚ್ಚ್ ಕೊಟ್ಟಿದ್ಯ?"
"ಎಮ್ಮೆ ಕೂಗತ್ತಲೆ, ಮಗ. 'ಅಕ್ಕಚ್ಚ್' ಬೇಕೇನೋ ಅದ್ಕೆ. ಹೋಯಿ ಕಾಣ್"
'ಗೋಗ್ರಾಸ' ಇಲ್ಲದೆ ಯಾವ ಊಟವೂ ಆರಂಭವಾಗುವುದಿಲ್ಲ. ದೀಪಾವಳಿಯ ಸಮಯದಲ್ಲಿ 'ಗೋಪೂಜೆ' ನನಗೆ ತುಂಬ ಖುಶಿ ಕೊಡ್ತಾ ಇದ್ದ ಹಬ್ಬ.

ಬೋನಸ್ ಪ್ರಶ್ನೆಗೆ ಉತ್ತರ -
'ನೆನಪಿನಂಗಳದಲ್ಲಿ ಮುಸ್ಸಂಜೆ ಹೊತ್ತು' - ಇದು ಕೋ.ಲ.ಕಾರಂತರ ಜೀವನಚರಿತ್ರೆ. ಶಾಂತಲಾಗೆ ಪೂರ್ತಿ ಅಂಕ:-)
'ಕೋ.ಲ.ಕಾರಂತ'ರು ಶಿವರಾಮ ಕಾರಂತರ ಸಹೋದರ. ಶಿಕ್ಷಣತಜ್ಞರು. ಜೀವನದ ಎಲ್ಲ ವಿಭಾಗಗಳಲ್ಲೂ ಶಿಕ್ಷಣ ಕೊಡಬೇಕು ಅನ್ನುವುದು ಅವರ ನಿಲುವಾಗಿತ್ತು. ಅದರಲ್ಲಿ ವ್ಯವಸಾಯವೂ ಒಂದು. ಅವರು ಸ್ವತಃ ತೋಟ ಬೆಳೆಸಿದ್ದರು. ಕುಂದಾಪುರದ ಬೋರ್ಡ್ ಹೈಸ್ಕೂಲ್, ಕೋಟದ ವಿವೇಕ ಹೈಸ್ಕೂಲ್-ಗಳ ಜೊತೆ ಅವರ ಹೆಸರು ಚಿರಸ್ಥಾಯಿಯಾಗಿದೆ. ದೇವರ ಕುರಿತು ಅವರದ್ದು 'ಏ.ಎನ್.ಮೂರ್ತಿರಾಯ'ರ ಥರದ ನಿಲುವು. ನಾಸ್ತಿಕರಾದರೂ ಹೆಂಡತಿಯ ಆಸ್ತಿಕತೆಯನ್ನು ಪ್ರಶ್ನಿಸಿದವರಲ್ಲ.

ಇವತ್ತಿನ ಸವಾಲು -
ಇದರ ಅರ್ಥ ಏನು - 'ಸೊಲಗೆ'?
ಸುಳಿವು - ಇದು ದ್ರವಗಳ ಮಾಪನ ಪರಿಮಾಣ.

ಬೋನಸ್ ಪ್ರಶ್ನೆ -
ಕರ್ನಾಟಕ ಏಕೀಕರಣದಲ್ಲಿ ಮಹತ್ತರ ಪಾತ್ರವನ್ನು ವಹಿಸಿದ ಶಿವರಾಮ ಕಾರಂತರ ಸಹೋದರ ಯಾರು?