May 26, 2008

ಇಂದೇ ಹಾರೈಸಿ

ಮಕ್ಕಳ ಕುರಿತಾಗಿರುವ ಎರಡು ಕನ್ನಡ ಬ್ಲಾಗುಗಳು - ನಂದಗೋಕುಲ ಮತ್ತು ನಿಶುಮನೆ ನಿನ್ನೆ ನಂದಗೋಕುಲದ ಅಮ್ಮುವಿನ ಹುಟ್ಟುಹಬ್ಬ. ಇವತ್ತು ನಿಶುವಿನ ಹುಟ್ಟುಹಬ್ಬ. ಇಂದೇ ಹಾರೈಸಿ :-)

ಹೊಸದೊಂದು ಮೊಗ್ಗು ಅರಳಿದೆ, ಕನ್ನಡ ಬ್ಲಾಗುಲೋಕದಲ್ಲಿ. ಕೇಶಾಲಂಕಾರ ಪ್ರಿಯರು (ನಾಗವೇಣಿಯರು, ನೀಲವೇಣಿಯರು, ಕೃಷ್ಣವೇಣಿಯರು) ತಪ್ಪದೇ ಇಂದೇ ಭೇಟಿ ಕೊಡಿ :-)

ರಾಧಿಕಾ ಅವರು ಕನ್ನಡದಲ್ಲಿ, ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತಾದ, ಮಾಹಿತಿ ಪ್ರಧಾನವಾದ ಬ್ಲಾಗೊಂದನ್ನು ಆರಂಭಿಸುತ್ತೇನೆಂದು ಭರವಸೆಯನ್ನು ನೀಡಿದ್ದಾರೆ. ಆದರೆ ಇದು ಚುನಾವಣಾ ಸಮಯದ ಆಶ್ವಾಸನೆಯಾಗಿರುವುದರಿಂದ ಓದುಗರು ಎಚ್ಚರಿಕೆಯಿಂದಿರಬೇಕೆಂದು ವಿನಂತಿಸಲಾಗಿದೆ. ಮುಂದಿನ ದಿನಗಳಲ್ಲಿ ಒಳ್ಳೆಯ ಮುಹೂರ್ತವಿದ್ದಲ್ಲಿ ತಿಳಿಸಬೇಕಾಗಿ ವಿನಂತಿ :-)

May 24, 2008

ನೀಕು

ಭಾಗವತರು ಬರೀ ಬೇರೆಯವರ ಕಾಲೆಳೆಯುತ್ತ ಕಾಲಹರಣ ಮಾಡುತ್ತಿದ್ದಾರೆನ್ನುವ ಗಂಭೀರ ಆಪಾದನೆಗಳು ಜಗಲಿಯನ್ನು ತಲುಪಿರುವುದರಿಂದ, ಕುಂದಗನ್ನಡದ ತರಗತಿಗಳನ್ನು ವಿದ್ಯುಕ್ತವಾಗಿ ಪುನರಾರಂಭಿಸಲು ಭಾಗವತರಿಗೆ ನಿರ್ದೇಶಿಸಲಾಗಿದೆ. ಸದರಿ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳು ಈ ಕೂಡಲೇ ಗುರುದಕ್ಷಿಣೆಯನ್ನು ಶ್ರೀ ಜಗಲಿ ಭಾಗವತರ ಖಾತೆಗೆ ಮುಂಗಡವಾಗಿ ಸಂದಾಯಿಸಬೇಕೆಂದು ಈ ಮೂಲಕ ಕೇಳಿಕೊಳ್ಳಲಾಗಿದೆ.
***************************

’ನೀಕು’ = ನಿಲುಕು (ಶಿಷ್ಟ ಕನ್ನಡದ ಸಮಾನಾರ್ಥಕ ಪದ, ನನ್ನ ಊಹೆಯ ಪ್ರಕಾರ). ಇಣುಕು, ಎಟುಕು.

"ನೀನ್ ಉದ್ದ ಇದ್ಯಲೆ (ಇದೀಯಲ್ಲ). ನ್ಯಾಲೆ (clothes line) ’ನೀಕತ್ತಾ’ ಕಾಣ್".
"ಬಾಮಿ (ಬಾವಿ) ನೀಕ್ಬೆಡ ಅಂದ್ನಾ? ಹಾಂಗಾರೆ ಹೇಳದ್ದ್ ಕೇಂತಿಲ್ಯಾ?"
"ಎಂತದಾ! ಅಷ್ಟು "ನೀಕಿ" ಕಾಂಬುಕೆ (ಕಾಣ್ಲಿಕ್ಕೆ) ಎಂಥ ಮಂಗ ಕುಣಿತಾ ಇತ್ತಾ ಅಲ್ಲಿ?" - ಗುರು ಕೊಟ್ಟ ಉದಾಹರಣೆ.
"ಹ್ವಾಯ್, ಹಾ೦ಗೇ ಬ್ಲಾಗ್ ಬದಿಗ್ ಹ್ವಾಪೊತ್ತಿಗೆ (ಹೋಗುವಾಗ) ಪಟ್ಟಾ೦ಗ ಕ೦ಡ್ ಹೀ೦ಗೇ ನೀಕಿದ್ದೇ."
"ನೀವ್ ಆ ತೊಡು ಇತ್ತು-ಷೆಡ ಬಿಡ ಮಾಣಿ ಕೈಗೆ ನೀಕು ಹಾ೦ಗೆ ಹಾಲ್ಬಾಯೋ-ಅತ್ರಾಸವೊ ಇಟ್ರಾತಿಲ್ಯ ಮಾರಾಯ್ರೇ!" - ಪಯಣಿಗರ ಉದಾಹರಣೆ.

ಸುಶ್ರುತ ಕೊಟ್ಟ ಉದಾಹರಣೆ ಭಿನ್ನವಾಗಿದೆ. ಇದು ಹವ್ಯಗನ್ನಡದ ಪ್ರಯೋಗವೇ, ಇಲ್ಲ ಕುಂದಗನ್ನಡದಲ್ಲೂ ಉಪಯೋಗಿಸುತ್ತಾರಾ?
"'ನೀಕು' ಅಂದ್ರೆ ಎತ್ತಿ ಕೊಡೋದು. "ಏ ಮಾಣೀ, ಒಂಚೂರು ಬುಟ್ಟಿ ನೀಕಿ ಕೊಡಾ" ಅಂತ ಅಪ್ಪ ಹೇಳಿದ ಅಂದ್ರೆ, ಬುಟ್ಟಿಯನ್ನ ಎತ್ತಿ ತಲೆ ಮೇಲಿಟ್ಟುಕೊಳ್ಳಲಿಕ್ಕೆ ಹೆಲ್ಪ್ ಮಾಡು ಅಂತ."

ಬಾನಾಡಿಯವರ ಉದಾಹರಣೆ ನೋಡಿದ್ರೆ ತುಳು ಪ್ರಭಾವ ಹೊಂದಿದೆಯೇನೋ ಅನ್ಸತ್ತೆ. ಗೊತ್ತಿದ್ದವರು ತಿಳಿಸಿ.
'ನೀಕು’ ಅಂದ್ರೆ ನೀವು ಕೂಡ. "ಆಟಕ್ಕೆ ನೀಕು ಹೋಗ್ತೀರಾ?"

ಬೋನಸ್ ಪ್ರಶ್ನೆಗೆ ಉತ್ರ :-
"ಬಡಕಟಿ ಮಾಣಿಗೆ ಸೆಡಕಟಿ ಜಾಸ್ತಿ" ಅಂದರೆ ಜಾಸ್ತಿ ಉಟ, ತಿಂಡಿ ತಿನ್ನದ ಸಣಕಲು ಮಕ್ಕಳು ’ಆ ಐಟಮ್ ಸರಿ ಇಲ್ಲಾ, ಇದು ಸರಿ ಇಲ್ಲಾ, ಉಪ್ಪು ಕಮ್ಮಿ, ಖಾರ ಜಾಸ್ತಿ’ ಹೀಂಗೆ ಕಂಪ್ಲೇಂಟ್ ಮಾಡ್ತಾ ಇದ್ದರೆ (ಬಾಯಿಷೆಡ ಅಂತ್ಲೂ ಹೇಳ್ತಾರೆ) ಮೇಲಿನ ನಾಣ್ಣುಡಿ ಹೇಳ್ತಾರೆ! - ನೆಂಪು ಗುರು ವ್ಯಾಖ್ಯಾನ.

ಕಾಂಬ್ಕೆ ಬಡವಾಗಿದ್ದರೂ ಕೊಬ್ಬು ಜಾಸ್ತಿ - ಶಾಂತಲಾ ಭಂಡಿ ವ್ಯಾಖ್ಯಾನ.

ಮಾಣಿ ಬಡಕಟಿಯಾದ್ರೂ ಮಾತಿಗೇನೂ ಕಡಿಮೆಯಿಲ್ಲ - ನಾವಡ ಉವಾಚ :-)

’ಬಡಕಟಿ’ = ಬಡಕಲು, ’ಸೆಡಕಟಿ’ = ಸೆಡಕು (ಸಿಟ್ಟು - ಸೆಡಕು, ಸೆಡವು). ಹೆಚ್ಚಾಗಿ ಸಣ್ಣ ದೇಹದವರು ತಿಂಡಿ ತಿನ್ನುವಾಗ ವಿಪರೀತ ಬಾಯಿ ರುಚಿ ತೋರಿಸಿದಾಗ, ಇಲ್ಲ ಹಠಮಾರಿಯಂತೆ ವರ್ತಿಸುವಾಗ ಇದನ್ನು ಪ್ರಯೋಗಿಸ್ತಾರೆ.

ಇವತ್ತಿನ ಸವಾಲು :-
’ಕಟ್ಕಟ್ಲೆ’ - ಈ ಶಬ್ದದ ಅರ್ಥ ಏನು?

ಬೋನಸ್ ಪ್ರಶ್ನೆ :-
ಗೊಂಬೆಯಾಟದಲ್ಲಿ ವಿಶ್ವಪ್ರಸಿದ್ಧವಾದ ಕುಂದಾಪುರ ತಾಲೂಕಿನ ತಂಡ ಯಾವುದು?

May 11, 2008

ಮಾಯಾವಿ ವಿಕ್ರಮ

ನಿನ್ನೆ ಇಲ್ಲೊಂದು ಯಕ್ಷಗಾನ ಇತ್ತು. ತುಂಬ ಚೆನ್ನಾಗಿದ್ದರಿಂದ ನಿಮ್ ಜೊತೆ ಮಾತ್ರ ಹಂಚ್ಕೊಳ್ತಿದ್ದೇನೆ. ಬೇರೆ ಯಾರಿಗೂ ಹೇಳ್ಬೇಡಿ.
ಓದುಗರಿಗೆ ಸೂಚನೆ :-
೧) ಪಾತ್ರಧಾರಿಯು ಬೆಂಗ್ಳೂರಿನಲ್ಲಿ ನೆಲೆಸಿ ತುಂಬ ವರ್ಷಗಳಾಗಿರುವುದರಿಂದ ಅಲ್ಲೊಂದು ಇಲ್ಲೊಂದು ಆಂಗ್ಲ ಪದ ಬಳಕೆಯಾಗಿದೆ.
೨) ಕೆಳಗಿನ ಕಥಾನಕವನ್ನ ಯಕ್ಷಗಾನದ ಧಾಟಿಯಲ್ಲೇ, ಶ್ರುತಿಬದ್ಧವಾಗಿ, ಸ್ವರಭಾರ, ಏರಿಳಿತ, ಆಂಗಿಕ ಮತ್ತು ವಾಚಿಕ ಅಭಿನಯದೊಂದಿಗೆ ಓದಿಕೊಂಡರೆ ರಸಾಸ್ವಾದನೆಗೆ ಒಳ್ಳೆಯದು.
೩) ಹಿ: - ಹಿಮ್ಮೇಳ. ಪಾ: ಪಾತ್ರಧಾರಿ, ನಾ: ನಾರದ ಮುನಿಗಳು.
೪) ಮೊದಲಿಗೆ ನಾಂದಿ ಪದ್ಯ. ನಂತರ ಒಡ್ಡೋಲಗದ ದೃಶ್ಯ.

***********************************
ಇಂದಿರೆಗೆ ತಲೆಬಾಗಿ ವಂದಿಸುತ ಪರಮಾನಂದ ಭಕ್ತಿಯೊಳಜನ ಧ್ಯಾನಿಸಿ ವಂದಿಸುತ ಶಾರದೆಗೆ ಶಕ್ರಾದ್ಯಮರರಿಂಗೆರಗಿ ನಾಂದಿಯೊಳು ವರವ್ಯಾಸ ಮುನಿಪದ ದ್ವಂದ್ವಕಾನತನಾಗಿ ನೆರೆದಿಹ ಕವಿಗಳ ಸಂದಣಿಗೆ ಬಲವಂದು ಪೇಳ್ವೆನೀ "ಅಧಿಕ ಪ್ರಸಂಗ" ಎಂಬ ಕಥಾಮೃತವ

ಹಿ : ಬಲ್ಲಿರೇನಯ್ಯಾ?
ಪಾ: ಮಾಯಾವಿ ವಿಕ್ರಮನೆಂದರೆ ಯಾರೆಂದು ತಿಳಿದಿದ್ದೀರಿ?
ಹಿ : ಇರುವಂಥ ಸ್ಥಳ
ಪಾ: ರಂಗಸ್ಥಳ
ಹಿ: ಹ್ಹ!!
ಪಾ: ವಿಶಾಲವಾದ ಬೆಂಗಳೂರು ಮಹಾನಗರವನ್ನೇ ಕಾರ್ಯಸ್ಥಾನವನ್ನಾಗಿ ಮಾಡಿಕೊಂಡವನಿಗೆ ಎಲ್ಲ ಸ್ಥಳವೂ ರಂಗಸ್ಥಳವೇ.
ಹಿ: ಹ್ಹ!!
ಪಾ: ಸಪ್ತಸಾಗರಗಳನ್ನ ದಾಟಿ, ದಿಗ್ವಿಜಯವನ್ನ ಪೂರೈಸಿ, ಸ್ವಸ್ಥಾನವಾದ ಬೆಂಗಳೂರು ಮಹಾನಗರಿಗೆ ಮರಳಿ ಬಂದಿರುವ ಸಂದರ್ಭ. ಮಹಾಕಾವ್ಯವೊಂದನ್ನು ಬರೆಯುವ ಉದ್ದೇಶದೊಂದಿಗೆ ಮರಳಿ ಬಂದೆನಾದರೂ, ವೈಯಕ್ತಿಕ ಕಾರಣಗಳಿಂದ ಜೀವಂತಕಾವ್ಯವೊಂದರೊಂದಿಗೆ ಮಗ್ನನಾಗುವ ಪರಿಸ್ಥಿತಿಗೆ ಸಿಲುಕಿಕೊಂಡೆ.
ಹಿ: ಜೀವಂತಕಾವ್ಯ? ಹ್ಹ!!!
ಪಾ: ಮಾಯಾವಿ ವಿಕ್ರಮ, ನಿನ್ನ ಕವನಗಳೆಲ್ಲಿ?, ಎಂದು ನನ್ನ ಪ್ರಜಾಪರಿವಾರವರ್ಗದವರೆಲ್ಲ ಒಕ್ಕೊರಲಿನಿಂದ ಕೇಳುತ್ತಿದ್ದಾರೆ. ಏನು ಮಾಡೋಣ? ಇದೆಲ್ಲ ಹೀಗೆಯೇ ಆಗಬೇಕೆಂದು ವಿಧಿಲಿಖಿತವಾಗಿದ್ದರೆ ಅದನ್ನು ತಪ್ಪಿಸಲು ನಾನ್ಯಾರು?
ಹಿ: ಹ್ಹ!!
ಪಾ: ಪಂಡಿತೋತ್ತಮರು ಮೆಚ್ಚಿ ’ವಿಕ್ಕಿ’ ಕವಿತೆಗಳೆಂದೂ, ಅರ್ಥವಾಗದೆ ಮಂಡೆಪೆಟ್ಟು ಮಾಡಿಕೊಂಡ ಮಂದಿ ’ವಿಕ್ಸ್’ ಕವಿತೆಗಳೆಂದೂ, ವಿಧ ವಿಧ ಹೆಸರುಗಳೊಂದಿಗೆ ನನ್ನ ಕವನಗಳನ್ನು ಗುರುತಿಸುತ್ತಾರೆ. ಕವನಗಳ ಮೂಲಕವೇ ಅಂಗ, ವಂಗ, ಕಳಿಂಗ, ಕಾಂಭೋಜವೇ ಮೊದಲಾದ ಛಪ್ಪನ್ನಾರು ದೇಶಗಳಲ್ಲಿ ಲೋಕೋತ್ತರ ಪ್ರಸಿಧ್ಧಿಯನ್ನು ಪಡೆದಿರುವಾಗ.....ಇದೇನನ್ನ ಕೇಳುತ್ತಿದ್ದೇನೆ?...
ಹಿ: ಏನ ಕೇಳಿದೆ ನಾನು? ಏನ? ಏನ?...ಏನ ಕೇಳಿದೆ ನಾನು? ಬಿಡಲಾರೆ....ನಾ...ಬಿಡಲಾರೆ...
ಪಾ: ಅದಾರೋ ಪರದೇಸಿಯಾದ ಜಗಲಿ ಭಾಗವತರಂತೆ...ನನ್ನ ಕುರಿತು ಲಘುವಾಗಿ ಬರೆಯುತ್ತಿದ್ದಾರೆ ಎನ್ನುವ ವರ್ತಮಾನ ರಾಜದೂತರಿಂದ ತಿಳಿದುಬಂದಿದೆ....ನಾನು ಬೆಂಗಳೂರು ಮಹಾನಗರಿಯನ್ನು ತಲುಪಿದ ಮೇಲೆ ಕರೆ ಮಾಡುತ್ತೇನೆ ಅಂದವರು ಈ ಕೆಲಸಕ್ಕೆ ಕೈ ಹಾಕಿದರೇ?..ಎಷ್ಟು ಧೈರ್ಯ? ಎಂತಹ ಅಧಟು?...ಅವರು ಎಲ್ಲಿಯೇ ಅಡಗಿರಲಿ.....ಅತಳ, ವಿತಳ, ಸುತಳ, ಪಾತಾಳ, ರಸಾತಳ, ಮಹಾತಳ, ತಳಾತಳದಲ್ಲೇ ಅಡಗಿರಲಿ, ಇಲ್ಲಾ ಭೂಗರ್ಭದಲ್ಲೇ ಅಡಗಿರಲಿ, ಅವರನ್ನ ಗೂಗಲಿಸಿ, ಹಿಡಿದೆಳೆತಂದು ತಕ್ಕ ಶಾಸ್ತಿಯನ್ನು ಮಾಡುತ್ತೇನೆ....
ಹಿ: ಸಮಾಧಾನ...ಸಮಾಧಾನ....
ಪಾ: ಹ್ಹ..ಇದೀಗಷ್ಟೇ ಬೇಹುಗಾರರಿಂದ ತಿಳಿದುಬಂದ ಸಮಾಚಾರ...ಅವರು ಲೋಕಕಲ್ಯಾಣಾರ್ಥವಾಗಿ ಶ್ರದ್ಧಾಭಕ್ತಿಯಿಂದ, ವಾರಾಂತ್ಯದಲ್ಲಿ ದಿನವೊಂದಕ್ಕೆ ೧೮ ಗಂಟೆಗಳಷ್ಟು ಘನಘೋರ ನಿದ್ದೆಯನ್ನು ಮಾಡುತ್ತಾರೆ ಎನ್ನುವ ಮಾಹಿತಿ....ನಿದ್ದೆಯಲ್ಲಿದ್ದವರನ್ನ, ರಣಕ್ಕೆ ಬೆನ್ನು ಹಾಕಿ ಓಡುತ್ತಿರುವವರನ್ನ, ನಿರಾಯುಧರನ್ನ ಘಾಸಿಗೊಳಿಸಬಾರದು ಎನ್ನುವುದು ಕ್ಷಾತ್ರಧರ್ಮ....ಹ್ಹಾ...ಈಗೇನು ಮಾಡಲಿ? ಇವರನ್ನ ನಿದ್ದೆಯಿಂದ ಎಬ್ಬಿಸುವ ವಿಧಾನ ಹೇಗೆ?
ಹಿ: ಮಸಾಲೆ ದೋಸೆಯ ವಾಸನೆ ತೋರಿಸಿದರೆ?
ಪಾ: ಹ್ಹಾ...ಭಲೇ...ಒಳ್ಳೆಯ ಯೋಜನೆ. ಇಗೋ, ನಿಮಗೆ ನನ್ನ ಕಂಠೀಹಾರವನ್ನ ಪಾರಿತೋಷವಾಗಿ ನೀಡುತ್ತಿದ್ದೇನೆ...ಯಾರಲ್ಲಿ? ಇವರಿಗೆ ಸಾವಿರ ಬಂಗಾರದ ವರಹಗಳನ್ನು ನೀಡಿ ಯಥೋಚಿತವಾಗಿ ಸನ್ಮಾನಿಸಿ....
ಹಿ: ಧನ್ಯೋಸ್ಮಿ.
ಪಾ: ಮಸಾಲೆ ದೋಸೆ ಹೇಗಿರಬೇಕು?
ಹಿ: ಹೇಗಿರಬೇಕು?
ಪಾ: ರುಚಿಕಟ್ಟಾಗಿರಬೇಕು...ರುಚಿ ಕಟ್-ಆಗಿರಬೇಕು...(ವ್ಯಂಗ್ಯ ನಗು)....ಹ್ಹ....ರಾಜಪಾಕಶಾಸ್ತ್ರಜ್ಞರಿಂದ ದೋಸೆಯನ್ನು ತಯಾರಿಸಿದ್ದಾಗಿದೆ...ಪದಾತಿ ದಳ, ಅಶ್ವಸೈನ್ಯ, ಗಜಸೈನ್ಯವೂ ಸಿದ್ಧವಾಗಿದೆ. ಇನ್ನೇನು ತಡ? ಹೊರಡೋಣವಂತೆ.....
(ನಾರದ ಮುನಿಗಳ ಪ್ರವೇಶವಾಗುವುದು).
ನಾ: ಭಾಗವತ.....ಭಾಗವತ.....
ಪಾ: ನಾರದ ಮುನಿಪುಂಗೋತ್ತಮರೇ...ಇದೋ ವಂದಿಸಿಕೊಂಡಿದ್ದೇನೆ.....ಆಸೀನರಾಗಿ.
ನಾ: ಆಯ್ಯಾ ಮಾಯಾವಿ ವಿಕ್ರಮ. ನಿನ್ನ ರಣೋತ್ಸಾಹವನ್ನು ನೋಡಿ, ಅನಾಹುತವನ್ನು ತಪ್ಪಿಸಲೋಸುಗ ಆತುರಾತರವಾಗಿ ಬಂದಿದ್ದೇನೆ.
ಪಾ: ಅನಾಹುತವೇ?
ನಾ: ಹೌದಯ್ಯ. ಜಗಲಿ ಭಾಗವತರು ಅಕ್ಷೋಹಿಣಿ ಸೈನ್ಯದ ಬಲವುಳ್ಳವರು. ಅಲ್ಲದೇ ಅವರ ಪುಣ್ಯನಾಮ ಸ್ಮರಣೆಯನ್ನು ಮಾಡಿದರೆ ನಿನಗೆ ಸನ್ಮಂಗಲ ಉಂಟಾಗುವುದಯ್ಯಾ..ಹಾಗಾಗಿ, ಈ ಯುದ್ಧವನ್ನು ಕೈ ಬಿಡು.
ಪಾ: ಮುನಿಪೋತ್ತಮರೇ, ನಿಮ್ಮ ಮಾತುಗಳನ್ನು ಮೀರಲಾರೆ. ಇಗೋ ಶಸ್ತ್ರಾಸ್ತ್ರಗಳನ್ನು ತ್ಯಜಿಸಿದ್ದೇನೆ...
ನಾ: ಒಳ್ಳೆಯದಾಗಲಿ. ಭಾಗವತ......ಭಾಗವತ.....
ಪಾ: ನಾರದ ಮಹರ್ಷಿಗಳ ಸಲಹೆಯನುಸಾರ ಯುದ್ಧವನ್ನು ಕೈಬಿಟ್ಟಿದ್ದೇನೆ.....ಹ್ಹಾ....ಬಹಳ ಆಯಾಸವುಂಟಾಗಿದೆ....ವಿಶ್ರಮಿಸಕೊಳ್ಳಬೇಕು....ಯಾರಲ್ಲಿ? ರಾಜಸಖಿಯರನ್ನು ಬರಹೇಳಿ.
ಹಿ: ಅವರೆಲ್ಲ ಮಹಿಳಾ ವಿಮೋಚನಾ ಸಭೆಗೆ ತೆರಳಿದ್ದಾರಯ್ಯ....
ಪಾ: ಹ್ಹಾ...ಎಂತಹ ದುರ್ಭರ ಪ್ರಸಂಗ ಇದು.
ಹಿ: ಅಧಿಕ ಪ್ರಸಂಗವೇ ಹೌದು.
ಪಾ: ಹ್ಹ...

(ಆಗ ಕರೆಂಟು ಕೈ ಕೊಟ್ಟಿದ್ದರಿಂದ ಮುಂದೇನಾಯ್ತೆಂದು ಸರಿಯಾಗಿ ಗೊತ್ತಾಗ್ಲಿಲ್ಲ. ಗೊತ್ತಿದ್ದವರು ತಿಳಿಸಿ.)

ಹಿ: ರಂಗನಾಯಕ ರಾಜೀವಲೋಚನ ರಮಣನೆ ಬೆಳಗಾಯಿತೇಳೆನ್ನುತ.........ಮಂಗಳಂ
**********************************************************